Apr 7, 2018

ನಾಗಾರ್ಜುನ ಸಾಗರ ಮತ್ತು ನಾಗಾರ್ಜುನಕೊಂಡ ಪ್ರವಾಸ - ೧

ನನಗೆ ಓದುವ ಹವ್ಯಾಸ... ಕೆಲವು ಆಯ್ದ ಲೇಖಕರ ಪುಸ್ತಕಗಳನ್ನು ಮಾತ್ರ ಓದುತ್ತೇನೆ. ಎಸ.ಎಲ್.ಭೈರಪ್ಪ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ತರಾಸು ಈ ಲೇಖಕರ ಪುಸ್ತಕಗಳನ್ನು ನಾನು ಹೆಚ್ಚಾಗಿ ಓದುವದು. ಬೆಂಗಳೂರಿಗೆ ಹೋದಾಗೆಲ್ಲ ಟೋಟಲ್ ಕನ್ನಡ ಪುಸ್ತಕದಂಗಡಿಗೆ ಹೋಗಿ ನನಗೆ ಬೇಕಾದ ಪುಸ್ತಕಗಳನ್ನು ತಗೊಂಡು ಬರುವದು ಹಾಗೂ ಹೈದೆರಾಬಾದಿನಿಂದ ಆನ್ಲೈನ್ ಖರೀದಿಸುವದು ನನ್ನ ರೂಢಿ. ಹಿಂದಿನ ಸಲ ಬೆಂಗಳೂರಿಗೆ ಹೋದಾಗ ಯಾವುದಾದರು ಬೇರೆ ಲೇಖಕರ ಪುಸ್ತಕಗಳನ್ನು ಓದಿ ನೋಡಬೇಕು ಅಂದುಕೊಂಡು ಅಲ್ಲಿ ಕೆಲಸ ಮಾಡುವ ಒಂದು ಹುಡುಗಿಗೆ ಕೇಳಿದೆ. ಅವಳು ಕೆ.ಎನ್.ಗಣೇಶಯ್ಯನವರ ಪುಸ್ತಕ ಓದಿ, ತುಂಬಾ ಚೆನ್ನಾಗಿರುತ್ತವೆ ಎಂದಳು. ನನ್ನ ಆಯ್ದ ಲೇಖಕರ ಪಟ್ಟಿಯಲ್ಲಿ ಈಗ ಗಣೇಶಯ್ಯನವರ ಹೆಸರು ಕೂಡ ಸೇರಿಕೊಂಡಿತು. ಅವರ ಬರಹ ಇಷ್ಟ ಆಗಿ ಅವರು ಬರೆದಿರುವ ಸುಮಾರು ಪುಸ್ತಕಗಳು ನನ್ನ ಗ್ರಂಥಭಂಡಾರಕ್ಕೆ ಸೇರಿದವು. ಗಣೇಶಯ್ಯನವರ "ಕಲ್ದವಸಿ" ಎನ್ನುವ ಕಥಾಸಂಕಲನವನ್ನು ಓದುತ್ತಿದ್ದಾಗ ಅಲ್ಲಿ ಬರೆದಿದ್ದ ನಾಗಾರ್ಜುನಕೊಂಡ ಎಂಬ ಸ್ಥಳ ನನ್ನ ಗಮನ ಸೆಳೆಯಿತು. ನಾನು ಇದನ್ನು ಸಿದ್ದಿಗೆ ಹೇಳಿದೆ. ಅಲ್ಲಿ ಹೋಗಿ ಬರೋಣ ಎಂದಾಗ ಅವರು ಸರಿ ಎಂದರು. ಇದು ನಮ್ಮ ನಾಗಾರ್ಜುನಕೊಂಡ ಪ್ರವಾಸಕ್ಕೆ ಪೀಠಿಕೆ ಹಾಕಿದ ಕಾರಣ.

ನಾಗಾರ್ಜುನಕೊಂಡಕ್ಕೆ ಹೋಗಲು ಒಂದು ತಿಂಗಳು ಮುಂಚೆಯಿಂದಾನೆ ತಯಾರಿ ನಡೆದಿತ್ತು. ನವಂಬರ್ ತಿಂಗಳಲ್ಲಿಯೇ ನಾಗಾರ್ಜುನ ಸಾಗರದಲ್ಲಿರುವ ವಿಜಯ ವಿಹಾರ ಹೋಟೆಲ್ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದೆವು. ಡಿಸೆಂಬರ್ ೨೪ ನೇ ದಿನದಂದು ನಲಗೊಂಡಕ್ಕೆ ಹೋಗಿ ಅಲ್ಲಿ ಛಾಯಾಸೋಮೇಶ್ವರ ದೇವಾಲಯ ಮತ್ತು ಬಾಲಚಂದ್ರುನಿ ಗುಡ್ಡದ ಮೇಲಿರುವ ದೆವ್ವ ಹುಣಸೆ ಮರ (Baobab tree ) ನೋಡಿ ಅಲ್ಲಿಂದ ನಾಗಾರ್ಜುನಸಾಗರಕ್ಕೆ ಹೋಗಿ ಆ ದಿನ ಎತ್ತಿಪೋತಲ ಜಲಪಾತ ನೋಡಿಕೊಂಡು ಮರಳಿ ಹೋಟೆಲ್ ಗೆ ಬಂದು ವಿಶ್ರಾಂತಿ ತೆಗೆದುಕೊಂಡು ಮಾರನೆಯ ದಿನ ಬೆಳಿಗ್ಗೆ ನಮ್ಮ ಸವಾರಿ ನಾಗಾರ್ಜುನ ಕೊಂಡದತ್ತ ಹೊರಟಿತು.

ನಾಗಾರ್ಜುನಕೊಂಡದ ಬಗ್ಗೆ ಸಣ್ಣ ಮಾಹಿತಿ ಕೊಡಲು ಇಚ್ಛಿಸುತ್ತೇನೆ. ನಾಗಾರ್ಜುನಕೊಂಡ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ನಾಗಾರ್ಜುನಸಾಗರದಲ್ಲಿರುವ ಐತಿಹಾಸಿಕ ಬೌದ್ಧ ಸ್ಥಳ. ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿಯುವ ಕೃಷ್ಣಾ ನದಿಗೆ ಆಣೆಕಟ್ಟನ್ನು ಕಟ್ಟಿದಮೇಲೆ ಬೌದ್ಧ ಪುರಾತತ್ವ ಸ್ಥಳ ನೀರಿನಲ್ಲಿ ಮುಳುಗಿತು. ಆ ನಂತರ ಅದನ್ನು ಅಗೆದು ಎತ್ತರದ ಸ್ಥಳಕ್ಕೆ ವರ್ಗಾಯಿಸಲಾಯಿತು, ಅದೇ ಈಗ ನಾಗಾರ್ಜುನಕೊಂಡ ದ್ವೀಪವಾಗಿದೆ. ಎಷ್ಟೋ ಬೌದ್ಧ ಸ್ಮಾರಕಗಳು ಇಲ್ಲಿ ಪುನರ್ನಿರ್ಮಾಣಗೊಂಡಿವೆ. ೨ನೆ ಶತಮಾನದಲ್ಲಿದ್ದ ಬೌದ್ಧ ಗುರು ನಾಗಾರ್ಜುನರ ಹೆಸರೇ ಈ ಜಾಗಕ್ಕೆ ಬಂದಿದೆ. ಈ ಸ್ಥಳ ಆ ಕಾಲದ ಅತೀ ಶ್ರೀಮಂತ ಬೌದ್ಧ ಸ್ಥಳ. ಇಲ್ಲಿ ಬೌದ್ಧ ಮಠಗಳು, ವಿಶ್ವವಿದ್ಯಾಲಯಗಳು ಎಷ್ಟೊಂದು ಪ್ರಸಿದ್ಧಿ ಹೊಂದಿದ್ದುವೆಂದರೆ ಚೀನಾ, ಶ್ರೀಲಂಕಾ, ಗಾಂಧಾರ, ಬೆಂಗಾಲ ಮುಂತಾದ ಸ್ಥಳಗಳಿಂದ ಬೌದ್ಧ ಸನ್ಯಾಸಿಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿ ಬರುತ್ತಿದ್ದರಂತೆ. ನಾಗಾರ್ಜುನಕೊಂಡ ಶಾತವಾಹನರ ಉತ್ತರಾಧಿಕಾರಿಗಳಾದ ಇಕ್ಷ್ವಾಕು ರಾಜವಂಶದ ರಾಜಧಾನಿಯಾಗಿತ್ತು.

ದಿನಾಂಕ್ ೨೫/೧೨/೨೦೧೭ ರಂದು ಬೆಳಿಗ್ಗೆ ೮ ಗಂಟೆಗೆ ವಿಜಯ ವಿಹಾರದ ಎದುರಿಗಿರುವ ಸಣ್ಣ ಹೋಟೆಲ್ನಲ್ಲಿ ಇಡ್ಲಿ ತಿಂದು, ನಾಗಾರ್ಜುನಕೊಂಡದಲ್ಲಿ ತಿನ್ನಲು ಸ್ವಲ್ಪ ಇಡ್ಲಿ ಕಟ್ಟಿಸಿಕೊಂಡು ಹಡಗು ನಿಲ್ಲುವ ಸ್ಥಳದತ್ತ ನಡೆದೆವು. ೯.೩೦ ಗೆ ಟಿಕೆಟ್ ಕೊಡಲು ಪ್ರಾರಂಭಿಸಿದರು. ಒಬ್ಬರಿಗೆ ೧೫೦/- ರೂಪಾಯಿಗಳು. ಟಿಕೆಟ್ ತೆಗೆದುಕೊಂಡು ಹಡಗಿನತ್ತ ನಡೆದೆವು. ಆ ಸಮಯದಲ್ಲಿ ಅಷ್ಟೇನು ಗದ್ದಲವಿರಲಿಲ್ಲ.


ತೆಲಂಗಾಣ ಪ್ರವಾಸೋದ್ಯಮದವರು ಎರಡು ಹಡಗನ್ನು ನಾಗಾರ್ಜುನಕೊಂಡಕ್ಕೆ ಹೋರಾಡಲು ಇಟ್ಟಿದ್ದಾರೆ. ಘಂಟೆಗೆ ಒಂದರಂತೆ ಬಾರಿ-ಬಾರಿಯಾಗಿ ಎರಡು ಹಡಗುಗಳು ಹೊರಡುತ್ತವೆ.


ಹಡಗಿನ ಸ್ಥಿತಿ ಚೆನ್ನಾಗಿದ್ದವು... ಕೆಳಗಡೆ ಹವಾ ನಿಯಂತ್ರಣ ಕೊಠಡಿ, ಮೇಲೆ ತೆರೆದ ಛಾವಣಿಯಲ್ಲಿ ಕುರ್ಚಿಗಳನ್ನು ಹಾಕಿ ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ನಾವು ಮೇಲೆಯೇ ಹೋದೆವು. ಹಡಗು ಸ್ವಲ್ಪ ಹೊತ್ತಿಗೆ ಜನ ಎಲ್ಲ ಹತ್ತಿದ ಮೇಲೆ ಹೊರಟಿತು.


ಹಡಗು ಹೊರಡುವವರೆಗೆ ಸುಮ್ಮನೆ ಕುಳಿತ ಜನ, ನಂತರ ಎದ್ದು ನಿಂತು ನಿಸರ್ಗದ ಚಲುವನ್ನು ಸವೆಯಲು, ಫೋಟೋ ತೆಗೆದುಕೊಳ್ಳಲು ಶುರು ಮಾಡಿದರು. ನಾನು ಕುಳಿತ ಕಡೆಗೆ ಬಿಸಿಲು ಬರುತ್ತಿದ್ದರಿಂದ ನಂಗೆ ಎಲ್ಲಿ ಇಡ್ಲಿ ಜೊತೆ ತಂದ ಚಟ್ನಿ ಹಳಸುತ್ತೋ ಎನ್ನೊ ಚಿಂತೆ. ನೆರಳಿರುವ ಜಾಗ ನೋಡಿ ನಾನು ಬ್ಯಾಗನ್ನು ಆ ಕಡೆ ತೆಗೆದುಕೊಂಡು ಹೋದೆ. ಹಡಗು ಮುಂದೆ ಹೋದಂತೆ ನೀರಿನಲ್ಲಿ ಮೂಡಿದ ಅದರ ಮಾರ್ಗದ ಗುರುತು ೨ರಿಂದ ೩ ನಿಮಿಷಗಳವರೆಗೂ ಹಾಗೆ ಕಾಣಿಸುತ್ತಿತ್ತು. ನಾನು ಸಣ್ಣ ತೆಪ್ಪದಲ್ಲಿ ಕುಳಿತಿದ್ದೆ, ಮೋಟಾರು ಹಡಗಿನಲ್ಲಿ ಕುಳಿತಿದ್ದು ಮೊದಲ ಬಾರಿ. ಈ ಹೊಸ ಅನುಭವ ನನಗೆ ತುಂಬಾ ಇಷ್ಟವಾಯ್ತು.


ಚಿಕ್ಕ-ಚಿಕ್ಕ ದೋಣಿಗಳಲ್ಲಿ ಮೀನುಗಾರರು ಮೀನು ಹಿಡಿಯಲು ಬಂದಿದ್ದರು. ದೂರಿಂದ ಆ ಬೆಟ್ಟ, ನೀರು, ದೋಣಿ, ಮಂಜು ಎಲ್ಲ ಸೇರಿ ನೋಡುಗರ ಮನ ಸೆಳೆಯುವಂತಿತ್ತು..


ಇದು ಹರಿಯುವ ನೀರಲ್ಲದ್ದರಿಂದ ಹಡಗು ಒಂದೇ ಮಟ್ಟದಲ್ಲಿ ಹೋಗುತ್ತಿತ್ತು. ನೀರನ್ನು ಸೀಳಿಕೊಂಡು ಹಡಗು ಮುಂದೆಹೋಗುವದನ್ನು ನೋಡುತ್ತಾ ನಿಂತುಕೊಂಡೆ.


ಮೀನುಗಾರರಿಗೆ ಸವಾಲಂತೆ ಕಡಲ ಹಕ್ಕಿಗಳು ಕೂಡ ಮೀನುಗಳನ್ನು ಕೆಲವೇ ಕ್ಷಣಗಳಲ್ಲಿ ಹಿಡಿದೊಯ್ಯುತ್ತಿದ್ದವು. ನಾನು ಅವುಗಳನ್ನು ಗಮನಿಸುತ್ತಾ ಕೂತಿದ್ದೆ, ಮೀನು ಯಾವಾಗ ಹಿಡಿಯುತ್ತಿದ್ದವೋ ಗೊತ್ತೇ ಆಗುತ್ತಿರಲಿಲ್ಲ, ಅಷ್ಟೊಂದು ವೇಗದಿಂದ ಕೆಲಸ ಮಾಡುತ್ತಿದ್ದವು. ಮೀನುಗಳು ಕೂಡ ನೀರಿನಿಂದ ಎತ್ತರಕ್ಕೆ ಜಿಗಿದು ಮತ್ತೆ ನೀರಿಗೆ ಧುಮುಕಿ ಮಾಯವಾಗುತ್ತಿದ್ದವು.


೧ ಘಂಟೆಯ ಹಡಗಿನ ಪ್ರಯಾಣದ ನಂತರ ಅಂತೂ ನಾಗಾರ್ಜುನಕೊಂಡ ದ್ವೀಪ ತಲುಪಿದೆವು. ಹಡಗಿನಿಂದ ಇಳಿಯುವಾಗ ಸರಿಯಾಗಿ ೧೧ ಘಂಟೆ. ಹಡಗಿನ ಉಸ್ತುವರ ಒಂದು ಘಂಟೆ ಅಷ್ಟೇ ಸಮಯವಿರೋದು ನೀವು ಬೇಗ ಎಲ್ಲ ನೋಡಿಕೊಂಡು ಇಲ್ಲಿಗೆ ಬಂದುಬಿಡಿ ಎಂದು ಹೇಳಿದನು. ನಮಗೆ ತುಂಬಾ ಕೋಪ ಬಂತು. ಒಂದು ಘಂಟೆಯಲ್ಲಿ ಏನು ನೋಡಲು ಸಾಧ್ಯ ಅಂತ. ಆ ನಂತರ ನಾವು ನಿರ್ಧಾರ ಮಾಡಿದೆವು, ಎಲ್ಲ ನೋಡಿಕೊಂಡು ಕೊನೆಯ ಹಡಗಿಗೆ ಮರಳುವದು ಎಂದು. ಕೊನೆಯ ಹಡಗು ಸಂಜೆ ೪ ಘಂಟೆಗೆ ಎಂದು ತಿಳಿದುಕೊಂಡು ಜಾಗಗಳನ್ನು ನೋಡಲು ಪ್ರಾರಂಭಿಸಿದೆವು.


ನಾಗಾರ್ಜುನಕೊಂಡ ದ್ವೀಪಕ್ಕೆ ಪ್ರವೇಶಿಸುತ್ತಿದ್ದಂತೆ ಬಲಗಡೆಗೆ ಈ ಮಾರ್ಗದರ್ಶಿ ನಕ್ಷೆಯ ಫಲಕವನ್ನು ನಾವು ನೋಡಬಹುದು.


ಪ್ರವೇಶದ ನಂತರ ಸ್ವಲ್ಪ ದೂರ ನಡೆದ ಮೇಲೆ ಎಡಗಡೆ ಈ ಕೆಳಗಿನ ಬುರುಜಿನ ಆಕಾರದ ರಚನೆಯನ್ನುಕಾಣಬಹುದು.. ಕಲ್ಲುಗಳನ್ನು ವೃತ್ತಾಕಾರದಲ್ಲಿ ಜೋಡಿಸಿ ಮೇಲೆ ಹೋದಂತೆ ವೃತ್ತಗಳು ಚಿಕ್ಕವಾಗುತ್ತ ಹೋಗುತ್ತವೆ.


ಕೆಳಗಿನ ಚಿತ್ರದಲ್ಲಿರುವ ಗುಡಿ ಪುನರ್ನಿರ್ಮಾಣಗೊಂಡದ್ದಲ್ಲ. ಇದು ಮೊದಲಿನಿಂದ ಅಲ್ಲಿಯೇ ಇದ್ದ ಹಿಂದೂ ಗುಡಿ. ಚಿತ್ರದಲ್ಲಿರುವ ಹನುಮಂತನ ಮೂರ್ತಿ ಈ ಗುಡಿಯಿಂದ ಸ್ವಲ್ಪ ದೂರದಲ್ಲಿದೆ.


ಮಾರ್ಗ ಮಧ್ಯದಲ್ಲಿ ಕಲ್ಲಿನಲ್ಲಿ ಕೆತ್ತಿದ ಈ ಹಾವಿನ ಚಿತ್ರ ನಮ್ಮನ್ನು ಸೆಳೆಯಿತು. ಸಿದ್ದಿ ನಾಗಾರ್ಜುನಕೊಂಡ ಹೆಸರಿಗೆ ಅನುಗುಣವಾಗಿ ನಾಗರಹಾವಿನ ಚಿತ್ರ ಕೆತ್ತಿದ ಹಾಗಿದೆ ಎಂದು ಹೇಳುತ್ತಿದ್ದರು. ಬಿಸಿಲು ಏರುತ್ತಿತ್ತು... ನಾವು ಕ್ಯಾಪ್ ಹಾಗು ಛತ್ರಿಯನ್ನು ಕಾರಿನಲ್ಲೇ ಮರೆತು ಬಂದಿದ್ದೆವು. ನನಗೆ ಹಂಪೆಗೆ ಹೋದಾಗ ಬಿಸಿಲಿನಲ್ಲಿ ತಿರುಗಾಡಿ ಕಪ್ಪಗೆ ಆಗಿದ್ದು ನೆನಪಿಗೆ ಬಂತು. ಮತ್ತೆ ಕರ್ರಗಾದ್ರೆ ಮತ್ತೆ ೧ ತಿಂಗಳಾದ್ರು ಸಮಯ ತೆಗೆದುಕೊಳ್ಳುತ್ತೆ ಎಂದು ಯೋಚಿಸತೊಡಗಿದ್ದೆ....


ನಾಗಾರ್ಜುನ ಕೊಂಡ ಒಂದು ಕೋಟೆಯಾಗಿತ್ತು ಎನ್ನಲು ಉಳಿದಿರುವ ಅವಶೇಷ ಈ ಕೆಳಗಿನ ಗೋಡೆ.


ಕೆಳಗಿನ ಚಿತ್ರದಲ್ಲಿರುವದು ಮೇಘಾಲಿತ್ ಸಿಸ್ಟ್ ಬರಿಯಲ್(ಬೃಹತ್ ಶಿಲಾ ಸಮಾಧಿ). ಸುತ್ತಲೂ ವೃತ್ತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಿ ನಡುವೆ ಗುಂಡಿ ತೋಡಿ ಶವವನ್ನು ಅದರಲ್ಲಿ ಹೂಳುತ್ತಿದ್ದರೆಂದು ಹೇಳಲಾಗುತ್ತದೆ.


ಸಿಂಹಲ ವಿಹಾರವು ಶ್ರೀಲಂಕಾದಿಂದ ಬಂದ ಬೌದ್ಧ ಸನ್ಯಾಸಿಗಳ ಮಠವಾಗಿತ್ತು. ಇಲ್ಲಿರುವ ಎರಡು ಚೈತ್ಯಾಗ್ರಹಗಳು ತುಂಬಾ ಆಕರ್ಷಕವಾದ ವಿನ್ಯಾಸ ಹೊಂದಿವೆ. ಬುದ್ಧನ ಮೂರ್ತಿ ತುಂಬಾ ಎತ್ತರವಾಗಿದ್ದು ಆಗಿನ ಬೌದ್ಧ ಧರ್ಮದ ಶ್ರೀಮಂತಿಕೆಯನ್ನು ಸಾರುತ್ತದೆ. ಇಲ್ಲಿ ನಾವು ಕಂಡ ಮತ್ತೊಂದು ಆಸಕ್ತಿದಾಯಕ ವಸ್ತು ಎಂದರೆ ಚಂದ್ರಶಿಲೆ. ಮಠದಲ್ಲಿ ಸಣ್ಣ ಸಣ್ಣ ಕೊನೆಗಳಿದ್ದು, ಪ್ರಾರ್ಥನೆ ಮಾಡಲು ದೊಡ್ಡ ಸಭಾಂಗಣವಿದೆ.


ಚೈತ್ಯಾಗ್ರಹದಲ್ಲಿರುವ ಬುದ್ಧನ ಮೂರ್ತಿ ... ಹಳೆಯ ಇಟ್ಟಿಗೆಗಳು ಎಷ್ಟೊಂದು ಗಟ್ಟಿಯಾಗಿವೆ ಎಂದರೆ ಹೇಳಲಸಾಧ್ಯ.


ಸಿಂಹಲ ವಿಹಾರ ಉದ್ದೇಶಿಕ ಸ್ತೂಪವೆಂದು ಕರೆಯಲಾಗುವ ಈ ಆಕೃತಿ ನನಗಾಣಿಸಿದಂತೆ ಶಾಬಾದಿ ಕಲ್ಲುಗಳಿಂದ ಮಾಡಿದ್ದು. ಗೋಳಾಕಾರದಲ್ಲಿರುವ ಈ ಸ್ತೂಪದ ಮೇಲ್ಮೈ ಎಷ್ಟೊಂದು ನಯವಾಗಿದೆ ಎಂದರೆ ಆನೆಕಲ್ಲಿನ ಮೇಲೆ ಕೈ ಆಡಿಸಿದಂತಾಗುತ್ತದೆ.


ನಾಗಾರ್ಜುನ ಸಾಗರ ಮತ್ತು ನಾಗಾರ್ಜುನಕೊಂಡ ಪ್ರವಾಸ - 2
.........

5 comments:

Unknown said...

Looks like you had wonderful time. Buddhists are like ancient Rome. Whenever Romans got free time they built so as these Buddists. They had lot of free time because they rejected all non Buddists theories like Saddarsana Nyaya, Sankya, Yoga, Vasheshika, Mimosa and Vedanta, along with Vedas. But Buddha was great.

Unknown said...

Oops .. spello . Mimaansa, I wrote it like a Samosa in above paragraph, visit Thummapala, close to Anakapalli or Vizag, can't remember. It is in the middle of nowhere (paddy fields).

pushpa said...

Yeah it was a good trip, the boat ride was an amazing experience! You seem to know lot about Buddhism. These words are quite new to me. Only that I know Buddha's teachings are simple and easy to understand. Thanks for the note about another site near Vizag.

Unknown said...

Very nice!! Pushpa you are very lucky:-)

pushpa said...

Thank you Saru.... happy to be visiting historical sites...